ಕೃಷ್ಣಭಕ್ತರ ಕುಣಿತ

ಯಾವ ಘೋಷ ಇದು ಇದಕ್ಕಿದ್ದಂತೆ ಈ ಕನಕಾಂಬರಿ ಸಂಜೆಯಲಿ ?
ತೇಲಿ ಹಾಯುತಿದೆ ಪರಿಮಳದಂತೆ ತುಂಬಿ ಹರಿವ ಈ ಗಾಳಿಯಲಿ
ತಾಳಮೃದಂಗದ ಬಡಿತ ಹಬ್ಬುತಿದೆ ಹೃದಯಕೆ ಲಗ್ಗೆಯ ಹೂಡುತಿದೆ
ಮೋಹಕ ಗಾನದ ಕಂಠದೇರಿಳಿತ ಜೀವಕೆ ಮರುಳನು ಕವಿಸುತಿದೆ
ಯಾವ ಅಲೌಕಿಕ ಶ್ರುತಿಯಿದು, ಇದಕ್ಕೆ ಲೋಕವ ಹೂಡಿದರೇತಕ್ಕೆ?
ಆರಿಹೋಗುತಿದೆ ಎಲ್ಲ ಧಗೆ ಈ ಪ್ರಾಣವೀಣೆಯ ನುಡಿತಕ್ಕೆ-
“ರಾಮಹರೇ ರಾಮಹರೇ, ರಾಮ ರಾಮ ಜಯರಾಮ ಹರೇ
ಕೃಷ್ಣ ಹರೇ ಕೃಷ್ಣ ಹರೇ, ಕೃಷ್ಣ ಕೃಷ್ಣ ಜಯ ಕೃಷ್ಣ ಹರೇ”

ಕುಣಿಯುತ ಬಂದರು ಕೈಗಳನೆತ್ತಿ ಕೃಷ್ಣ ಭಕ್ತರು ಬೀದಿಯಲಿ
ಆನಂದದ ಉದ್ರೇಕಕೆ ತುಳುಕಿದೆ ಕಂಬನಿಧಾರೆ ಕೆನ್ನೆಯಲಿ
ಹೊಳೆಯುವ ನುಣ್ಣನೆ ತಲೆ, ಹಿಂಬದಿಯಲಿ ಚಲಿಸುತ್ತಿದೆ ಶಿಖೆ ಅತ್ತಿತ್ತ
ಸರಿದವು ವಾಹನ ದಾರಿಯ ಬಿಟ್ಟು, ಒಳಗಿನ ಜನ ಕೈಮುಗಿಯುತ್ತ
ಕುಣಿದರು ಭಕ್ತರು ಲಜ್ಜೆಯ ತೊರೆದು ಹಾಡಹಗಲು ನಡುಬೀದಿಯಲಿ
ಹಿಂದೆ ಕುಣಿದಂತೆ ಪ್ರಭು ಚೈತನ್ಯರು ದನಿಯನೆತ್ತಿ ಆಕಾಶದಲಿ-
“ರಾಮ ಹರೇ ರಾಮ ಹರೇ, ರಾಮ ರಾಮ ಜಯರಾಮ ಹರೇ
ಕೃಷ್ಣ ಹರೇ ಕೃಷ್ಣ ಹರೇ, ಕೃಷ್ಣ ಕೃಷ್ಣ ಜಯ ಕೃಷ್ಣ ಹರೇ”

ಮಿರುಗುವ ಗೋಪೀಚಂದನ ಹಣೆಯಲಿ, ಕೊರಳಲಿ ತುಳಸೀಮಣಿಮಾಲೆ
ಎದೆಯಲಿ ತೂಗುವ ಸಣ್ಣ ಚೀಲದಲಿ ಶ್ರೀಹರಿ ಸ್ಮರಣೆಗೆ ಜಪಮಾಲೆ
ಭೋಗಕೆ ಬಾಗದ ಬತ್ತಿದ ದೇಹ, ಕಣ್ಣೋ ಹಚ್ಚಿದ ಹಣತೆಗಳು
ದಿನವಿಡಿ ಕೃಷ್ಣನ ನೋಡಿ ನೋಡಿ ಕಪ್ಪೇರಿದ ನೇರಿಳೆ ಹಣ್ಣುಗಳು
ಯಾವ ಕಾಲದಿಂದೆದ್ದು ಬಂದಿತೋ ಭಕ್ತಿರಸದ ಈ ಸುಖಚಿತ್ರ?
ನಿಂತ ನೆಲವ ಬೃಂದಾವನವಾಯಿತು ಕುಣಿಯಲು ಭಕ್ತರು ಹಾಡುತ್ತ-
“”ರಾಮ ಹರೇ ರಾಮ ಹರೇ, ರಾಮ ರಾಮ ಜಯರಾಮ ಹರೇ
ಕೃಷ್ಣ ಹರೇ ಕೃಷ್ಣ ಹರೇ, ಕೃಷ್ಣ ಕೃಷ್ಣ ಜಯ ಕೃಷ್ಣ ಹರೇ”

ತೋಳ ಚಿರತೆಗಳು ಗದ್ದುಗೆ ಹಿಡಿದ ಗೊಂದಲಾಸುರನ ರಾಜ್ಯದಲಿ
ಉರಿವ ಬಾಣಲಿಗೆ ಬಿದ್ದಿದೆ ಬದುಕು ನರಳಿದೆ ನಾಸ್ತಿಕ ವ್ಯಾಜದಲಿ
ಹೇಗೆ ಹುಟ್ಟಿತೀ ಹೊಸ ಹೂವಿನಗಿಡ ಬತ್ತಿ ಹೋದ ಒಣಪಾತಿಯಲಿ?
ಮತ್ತೆ ಬಂದರೋ ಕನಕಪುರಂದರ ಶರೀಫರೆನ್ನುವ ರೀತಿಯಲಿ
ಕುಣಿದರು ಭಕ್ತರು ಅಂತರಂಗವನೆ ಮೃದಂಗಮಾಡಿ ಬಡಿಯುತ್ತ
ನೋಡಿದ ಜನ ರೋಮಾಂಚಿತರಾದರು ತಾವೂ ಕುಣಿದರು ಹಾಡುತ್ತ-
“ರಾಮಹರೇ ರಾಮಹರೇ, ರಾಮ ರಾಮ ಜಯರಾಮ ಹರೇ
ಕೃಷ್ಣ ಹರೇ ಕೃಷ್ಣ ಹರೇ, ಕೃಷ್ಣ ಕೃಷ್ಣ ಜಯ ಕೃಷ್ಣ ಹರೇ”

ದೇಶ ಜಾತಿ ಮತ ಭೇದವಿಲ್ಲದ ಸಕಲೋದ್ಯಾನದ ಪುಷ್ಟಗಳು
ಕಪ್ಪು ಬಿಳುಪುಗಳ ಭೇದವನಳಿಸಿ ಗಂಗೆಯಮುನೆ ಥರ ನೆರೆದವರು
ಇಂದ್ರಿಯದುರಿಗಳ ಹೃಷಿಕೇಶಪದ ಗಂಗೆಯಲ್ಲಿ ಮುಳುಗಿಸಿದವರು
ಕೃಷ್ಣನಾಮ ಸಂಕೀರ್ತನ ಯಜ್ಞಕೆ ಮೈಯೇ ವೇದಿಕೆಯಾದವರು.
ಹಾಡುತ ಕುಣಿಯುತ ನಡೆದರು ಭಕ್ತರು ಸಾಗುವಂತೆ ಶ್ರೀಹರಿಯತ್ತ
ಸುತ್ತ ನಿಂತ ಜನ ಹಾಡಿದರೊಟ್ಟಿಗೆ ನದಿಗಳು ಕಡಲಿಗೆ ಕೂಡುತ್ತ-
“ರಾಮಹರೇ ರಾಮಹರೇ, ರಾಮ ರಾಮ ಜಯರಾಮ ಹರೇ
ಕೃಷ್ಣ ಹರೇ ಕೃಷ್ಣ ಹರೇ, ಕೃಷ್ಣ ಕೃಷ್ಣ ಜಯ ಕೃಷ್ಣ ಹರೇ”

ಕೃಷ್ಣನೆ ಸ್ವಾಮಿ ಕೃಷ್ಣನಮಾಮಿ ಈ ವಿಶ್ವದ ಪ್ರಭು ನೀನೆಂದು
ಕೃಷ್ಣನೆ ಸ್ವಾಮಿ ಕೃಷ್ಣನಮಾಮಿ ನಿನ್ನ ಸೇವಕರು ನಾವೆಂದು
ಭಕ್ತಿಸೇವೆಯಲಿ ಮೈಮರೆಯುವುದೆ ಮುಕ್ತಿಗು ಮೀರಿದ ಗುರಿಯೆಂದು
ಭಾವದ್ಭಾವಕೆ ಮತ್ತೆ ಮರಳುವುದೆ ಭಕ್ತಿಸೇವೆಯ ಗುರಿ ಎಂದು
ಗುರುಪ್ರಭುಪಾದರ ತಾಳದ ದನಿಗೆ ಹಾಡಲು ಭಕ್ತರು ಕುಣಿಯುತ್ತ
ಲೋಕಕೆ ಲೋಕವ ದನಿಗೂಡಿಸಿತು ಕೃಷ್ಣನ ಪಾದಕೆ ಮಣಿಯುತ್ತ-
“ರಾಮಹರೇ ರಾಮಹರೇ, ರಾಮ ರಾಮ ಜಯರಾಮ ಹರೇ
ಕೃಷ್ಣಹರೇ ಕೃಷ್ಣಹರೇ, ಕೃಷ್ಣ ಕೃಷ್ಣ ಜಯಕೃಷ್ಣ ಹರೇ.”
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೆಣ್ಣು
Next post ಮೋಹನ ಮುರಳಿ

ಸಣ್ಣ ಕತೆ

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

cheap jordans|wholesale air max|wholesale jordans|wholesale jewelry|wholesale jerseys